ಹೊಸದಿಲ್ಲಿ, ನಗರದಲ್ಲಿ ಭಾರೀ ಮಳೆ ಸುರಿದ ಒಂದು ದಿನದ ನಂತರ ಶನಿವಾರ ಮಧ್ಯಾಹ್ನ ಹೊರ ಉತ್ತರ ದಿಲ್ಲಿಯ ಎಸ್‌ಪಿ ಬದಲಿ ಪ್ರದೇಶದ ಅಂಡರ್‌ಪಾಸ್‌ನಲ್ಲಿ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೆಟ್ರೋ ಬಳಿಯ ಸಿರಸ್‌ಪುರ ಅಂಡರ್‌ಪಾಸ್ ಬಳಿ ಈ ಘಟನೆ ಸಂಭವಿಸಿದ್ದು, 2.5-3 ಅಡಿಗಳಷ್ಟು ನೀರು ತುಂಬಿಕೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಧ್ಯಾಹ್ನ 2.25ರ ಸುಮಾರಿಗೆ ಬಾಲಕರು ನೀರಿನಲ್ಲಿ ಮುಳುಗಿರುವ ಬಗ್ಗೆ ಪೊಲೀಸರಿಗೆ ಕರೆ ಬಂದಿದ್ದು, ತಕ್ಷಣವೇ ತಂಡವೊಂದು ಸ್ಥಳಕ್ಕೆ ಧಾವಿಸಿದೆ. ಅವರು ಶೋಧ ಕಾರ್ಯಾಚರಣೆಯನ್ನು ನಡೆಸಿದರು ಮತ್ತು ಅಗ್ನಿಶಾಮಕ ದಳದ ಸಹಾಯದಿಂದ ಅವರು ಶವಗಳನ್ನು ಹೊರತೆಗೆದರು ಎಂದು ಅಧಿಕಾರಿ ಹೇಳಿದರು.

ಈ ಪೈಕಿ ಓರ್ವ ಬಾಲಕ ಸಿರಸ್‌ಪುರ ನಿವಾಸಿಯಾಗಿದ್ದು, ಮತ್ತೊಬ್ಬನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಬಾಲಕರು ಸ್ನಾನ ಮಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಮೃತದೇಹಗಳನ್ನು ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ರವಾನಿಸಲಾಗಿದೆ. 174 ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಅಡಿಯಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.